5 ವರ್ಷದ ಮಗು ಪ್ರಕರಣ: ಹುಬ್ಬಳ್ಳಿ – ಧಾರವಾಡ ಪೊಲೀಸರಿಗೆ ಹೊಸ ಸಂಕಷ್ಟ!

5 ವರ್ಷದ ಮಗು ಪ್ರಕರಣ: ಹುಬ್ಬಳ್ಳಿ - ಧಾರವಾಡ ಪೊಲೀಸರಿಗೆ ಹೊಸ ಸಂಕಷ್ಟ!

ಕರ್ನಾಟಕ : ಕರ್ನಾಟಕ ಸೇರಿದಂತೆ ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಹುಬ್ಬಳ್ಳಿಯಲ್ಲಿನ 5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸ್ಗೆ ಹೊಸ ಸಂಕಷ್ಟ ಎದುರಾಗಿದೆ. ಐದು ವರ್ಷದ ಬಾಲಕಿಯ ಹತ್ಯೆ ಪ್ರಕರಣವು ಕರ್ನಾಟಕದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಎನ್ಕೌಂಟರ್ ಮಾಡಿದ ಕ್ರಮವು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೂ ಪಾತ್ರವಾಗಿತ್ತು. ಆದರೆ, ಇದೀಗ ಈ ಪ್ರಕರಣದಲ್ಲಿ ಹೊಸದೊಂದು ಸಂಕಷ್ಟ ಎದುರಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಬಾಲಕಿಯನ್ನು ಹತ್ಯೆಗೈದು ಎನ್ಕೌಂಟರ್ನಲ್ಲಿ ಬಲಿಯಾದ ಆರೋಪಿ ರಿತೇಶಕುಮಾರ (35)ನ ವಿಚಾರದಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಈಗಾಗಲೇ ಈ ಪ್ರಕರಣದಲ್ಲಿ ಕಾನೂನು ಸಂಕಷ್ಟವೂ ಪೊಲೀಸರಿಗೆ ಎದುರಾಗಿದೆ. ಇದು ಯಾವ ರೀತಿಯ ಎನ್ಕೌಂಟರ್ ಎನ್ನುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಉತ್ತರಗಳನ್ನೂ ನೀಡಿದ್ದಾರೆ.

ಇದೀಗ ಆರೋಪಿಯ ಕುಟುಂಬಸ್ಥರ ಸುಳಿವು ಪತ್ತೆ ಪೊಲೀಸರಿಗೆ ದೊಡ್ಡ ಸಮಸ್ಯೆ ಆಗಿದ್ದು. ಆತ ಬಳಸುತ್ತಿದ್ದ ಹಿಂದಿ ಭಾಷೆ ಮೂಲಕ ಆರೋಪಿ ಪತ್ತೆಗೆ ಹು-ಧಾ ಕಮಿಷನರೇಟ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಭಾಷಿಕ ಎಲ್ಲ ರಾಜ್ಯಗಳಿಗೂ ಪ್ರತ್ಯೇಕ ತಂಡಗಳನ್ನು ರವಾನಿಸಿ, ಆತನ ಪರಿಚಯಸ್ಥರು ಮತ್ತು ಕುಟುಂಬಸ್ಥರ ಪತ್ತೆ ಕಾರ್ಯ ಮುಂದುವರಿಸಲಾಗಿದೆ. ಹುಬ್ಬಳ್ಳಿ-ಧಾರವಾಡದಿಂದ ಬಿಹಾರಕ್ಕೆ ತೆರಳಿದ ತಂಡ ವಾಟ್ಲಾ ಸೇರಿದಂತೆ ಸುತ್ತಲಿನ ಪೊಲೀಸ್ ಠಾಣೆಗೆ ಭೇಟಿಯಾಗಿ ಆತನ ಕುಟುಂಬಸ್ಥರ ಕಾರ್ಯ ಮುಂದುವರಿಸಿದೆ. ಅಲ್ಲಿಯೇ ಬಿಡು ಬಿಟ್ಟಿರುವ ತಂಡ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಸುತ್ತಲಿನ ಗ್ರಾಮಗಳಲ್ಲಿ ಆರೋಪಿ ರಿತೇಶಕುಮಾರ ಭಾವಚಿತ್ರ ಹಿಡಿದು ಹುಡುಕಾಟ ನಡೆಸುತ್ತಿದೆ. ಆದರೆ, ತಂಡಕ್ಕೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ, ಹೀಗಾಗಿ ಉತ್ತರಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ, ಛತ್ತಿಸಗಡ್ ಹಾಗೂ ಹರಿಯಾಣ ಸೇರಿದಂತೆ ಹಿಂದಿ ಭಾಷೆ ಆಡುವ ಪ್ರದೇಶಗಳಿಗೆ ತಂಡವನ್ನು ಕಳುಹಿಸಲಾಗಿದೆ. ಅಲ್ಲದೇ, ಅಲ್ಲಿನ ಸ್ಥಳೀಯ ಕಮಿಷನರ್, ಎಸ್ಪಿಗಳನ್ನು ನೇರವಾಗಿ ಈ ತಂಡಗಳು ಸಂಪರ್ಕಿಸಿ ಆರೋಪಿಯ ಸಂಪರ್ಕ, ಕುಟುಂಬಸ್ಥರು ಮತ್ತು ಪರಿಚಯಸ್ಥರ ಪತ್ತೆ ಕಾರ್ಯ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಹುಬ್ಬಳ್ಳಿ ಸಂಪರ್ಕಿಸುವ ಗದಗ, ಹಾವೇರಿ, ದಾವಣಗೆರೆ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ಸುತ್ತಲಿನ ಜಿಲ್ಲೆಗಳ ಜತೆಗೆ ರಾಜ್ಯದ 30 ಜಿಲ್ಲೆಗೂ ಪೊಲೀಸ್ ಸಿಬ್ಬಂದಿಯನ್ನು ರವಾನಿಸಲಾಗಿದೆ. ಅಲ್ಲದೇ, ಅಲ್ಲಿನ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕಾಗಿ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಠಾಣೆಗಳ ಇಬ್ಬರು ಅಥವಾ ಮೂರು ಸಿಬ್ಬಂದಿಯನ್ನು ಈ ಕಾರ್ಯಾಚರಣೆಗೆ ನೇಮಿಸಿಕೊಂಡು ತಂಡ ಕಳುಹಿಸಲಾಗಿದೆ. ಇದೇ ವೇಳೆ, ಸ್ಥಳೀಯವಾಗಿ ಪರಿಚಯಸ್ಥರ ಪತ್ತೆಗೆ ಮತ್ತಷ್ಟು ಆಳವಾದ ತನಿಖೆಗೆ ಎರಡೂರು ತಂಡ ನಿಯೋಜಿಸಲಾಗಿದೆ. ಈ ತಂಡಗಳು ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಹುಬ್ಬಳ್ಳಿಯಲ್ಲಿ ಓಡಾಟ ನಡೆಸಿರುವ ಸಮಗ್ರ ಮಾಹಿತಿ ಕಲೆ ಹಾಕುತ್ತಿವೆ. ಆ ಮೂಲಕ ಸ್ಥಳೀಯವಾಗಿ ಆತನ ಪರಿಚಯಸ್ಥರು ಯಾರಾದರೂ ಇದ್ದಾರೆಯೇ, ಆತ ಯಾವ ಮಾರ್ಗವಾಗಿ ಹುಬ್ಬಳ್ಳಿಗೆ ಬಂದಿದ್ದಾನೆಂಬ ಮಾಹಿತಿ ಸಂಗ್ರಹಿಸುತ್ತಿದೆ. ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *